Thursday, September 29, 2016
Friday, September 9, 2016
ಶಿಕ್ಷಕರ ಸ್ವ ಗೃಹದಲ್ಲಿ ಶಿಕ್ಷಕ ದಿನಾಚರಣೆ
ನಮ್ಮಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಶಿಕ್ಷಕ ದಿನಾಚರಣೆಯ ಅಂಗವಾಗಿ, ಶಾಲೆಯಲ್ಲಿ ಶಿಕ್ಷಕರಾಗಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತ ಶಿಕ್ಷಕಿ ಶ್ರೀಮತಿ ಪ್ರೇಮ ಟೀಚರ್ ರವರ ಬಗ್ಗೆ ಗುರುವಂದನಂ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಇನ್ನೋರ್ವ ಶಿಕ್ಷಕ ಶಾಲಾ ಹಳೇ ವಿದ್ಯಾರ್ಥಿ ಎಸ್.ಎನ್.ಎಚ್.ಎಸ್ ಪೆರ್ಲ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತ ಶಿಕ್ಷಕ ಎಸ್.ಕೆ ಸುಬ್ರಹ್ಮಣ್ಯ ಭಟ್ ಪಾಲ್ತಮೂಲೆ ಇವರ ಸ್ವ ಗೃಹಕ್ಕೆ ತೆರಳಿ ಶಾಲು ಹೊದಿಸಿ, ಫಲಪುಷ್ಪ ತಾಂಬೂಲ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತನ್ನ ಬಾಲ್ಯ ಕಾಲದ ಸವಿ ಅನುಭವವನ್ನು ನೆನಪಿಸುತ್ತಾ ಮಕ್ಕಳಿಗೆ ನೀಡುವ ಪ್ರೋತ್ಸಾಹವೇ ಕಲಿಕೆಯ ಔನತ್ಯಕ್ಕೆ ಮೂಲ ಭಯರಹಿತ ವಾತಾವರಣವನ್ನು ರೂಪಿಸುವುದರಿಂದ ಮಕ್ಕಳಿಗೆ ಕಲಿಕೆ ಆಸಕ್ತಿದಾಯಕವಾಗಲು ಸಾಧ್ಯ ಹಾಗೂ ಸಾಕಷ್ಟು ಅವಕಾಶಗಳನ್ನು ನೀಡಬೇಕು ಎಂದು ಈ ಸಂದರ್ಭದಲ್ಲಿ ಅವರು ನುಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ ಶಿವರಾಮ್ ಭಟ್ ರವರು ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಗೀತಾಕುಮಾರಿ ಬಿ. ವಂದಿಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಾಕ್ಷ ಶ್ರೀ ಶ್ರೀಧರ್ ಭಟ್ ಸಜಂಗದ್ದೆ ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.
ಸಂಸ್ಕೃತ ದಿನಾಚರಣೆ
ನಮ್ಮಶಾಲೆಯಲ್ಲಿ ಶ್ರಾವಣ ಹುಣ್ಣಿಮೆಯಂದು ಸಂಸ್ಕೃತ ದಿನಾಚರಣೆಯನ್ನು ಆಚರಿಸಲಾಯಿತು. ಇದರ ಅಂಗವಾಗಿ ನಿತ್ಯೋಪಯೋಗಿ ಸುಮಾರು ೧೦೦ ವಸ್ತುಗಳನ್ನು ಸಂಸ್ಕೃತ ನಾಮಧ್ಯೇಯದೊಂದಿಗೆ ಪ್ರದರ್ಶಿಸಲಾಗಿತ್ತು. ಈ ಕಾರ್ಯಕ್ರಮವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಚಿತ್ರಾ ಮುಂಗ್ಲಿಕಾನ ಇವರು ಉಧ್ಘಾಟಿಸಿದರು. ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಂತರ ಮಕ್ಕಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ಜರಗಿತು. ಅಭಿನಯ ಗೀತೆ, ನಾಟಕ, ಸಮೂಹ ಗಾನ, ಸಮೂಹ ನೃತ್ಯಗಳಿಂದ ಮಕ್ಕಳು ಮನರಂಜಿಸಿದರು. ಸಂಸ್ಕೃತ ಶಿಕ್ಷಕ ಶ್ರೀ ಶ್ರೀ ಹರಿ ಶಂಕರ ಶರ್ಮ ರವರ ನೇತೃತ್ವದಲ್ಲಿ ಮಾಸ್ಟರ್ ವೈಷ್ಣವ್ ಕಾರ್ಯಕ್ರಮ ನಿರೂಪಿಸಿದನು.
Wednesday, September 7, 2016
ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ
ನಮ್ಮ ಶಾಲೆಯಲ್ಲಿ ೭೦ ನೇ ಸಂಭ್ರಮದ ಸ್ವತಂತ್ರೋತ್ಸವ ಜರಗಿತು. ಶಾಲಾ ದೈನಂದಿನ ಎಸ್ಸೆಂಬ್ಲಿಯಲ್ಲಿ ನಿವೃತ್ತ ಯೋಧ ಗೋವಿಂದ ನಾಯಕ್ ಮೊಗೇರು ದ್ವಜ ವಂದನೆ ಗೈಯುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮೊದಲು ತಂದೆ ತಾಯಿ, ಗುರುಹಿರಿಯರನ್ನು ಪ್ರೀತಿಸಿ ಮತ್ತೆ ದೇಶವನ್ನು ಪ್ರೀತಿಸಿ ಎನ್ನುವ ಸಂದೇಶವನ್ನಿತ್ತರು. ತಮ್ಮ ವೃತ್ತಿಯ ಅನುಭವವನ್ನು ಕೂಡಾ ಮಕ್ಕಳೊಡನೆ ಹಂಚಿಕೊಂಡರು. ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಕೆ ವೈ ಸುಬ್ರಹ್ಮಣ್ಯ ಭಟ್ ರವರು ಸೈನಿಕ ಹುದ್ದೆಯನ್ನು ಪ್ರೀತಿಸಬೇಕು, ತಾವು ಮುಂದೆ ಸೈನಿಕ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಸಂದೇಶವನಿತ್ತರು. ವಾರ್ಡ್ ಮೆಂಬರ್ ಚಂದ್ರಾವತಿ ಟೀಚರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ವ್ಯವಸ್ಥಾಪಕ ಹೃಷಿಕೇಶ ವಿ.ಎಸ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸುಚಿತ್ರ ಮುಂಗ್ಲಿಕಾನ ಉಪಸ್ಥಿತರಿದ್ದರು. ಅತಿಥಿ ಅಬ್ಯಾಗತರು ಸ್ವಾತಂತ್ರೋತ್ಸವದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು. ನಂತರ ಧ್ವನಿ ವರ್ಧಕದ ದೇಶ ಭಕ್ತಿಗಾನಕ್ಕೆ ಮಕ್ಕಳು ಮೆರವಣಿಗೆಯಲ್ಲಿ ಡಿಸ್ ಪ್ಲೇ ಪ್ರದರ್ಶನ ವಿತ್ತರು. ಭಾರತ ಮಾತೆಯಾಗಿ ಕುಮಾರಿ ಸಂಜನಾ ಹೃಷಿಕೇಶ್ ಹಾಗೂ ಗಾಂಧೀಜಿಯಾಗಿ ಹೇಮಂತ ಕೃಷ್ಣ ಮೆರವಣಿಗೆಯ ಮುಂದಾಳತ್ವ ನೀಡಿದರು.
ಶಾಲೆಯಲ್ಲಿ ವರಮಹಾಲಕ್ಷ್ಮೀ ಪೂಜೆ
ನಮ್ಮ ಶಾಲೆ ವಠಾರಲ್ಲಿ ಮಾತೃ ಸಂಘದ ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ ಜರಗಿತು. ಪುರೋಹಿತ ಶ್ರೀಧರ್ ಭಟ್ ಸಜಂಗದ್ದೆಯವರ ನೇತೃತ್ವದಲ್ಲಿ ವಿನಯ ನಾಗರಾಜ್ ಕೋಟೆ ಇವರು ಶ್ರದ್ಧಾ ಭಕ್ತಿಯಿಂದ ಪೂಜೆಯನ್ನು ನೆರವೇರಿಸಿದರು. ಸುಮಂಗಲೆಯವರು ಲಲಿತಾ ಸಹಸ್ರ ನಾಮವನ್ನು ಪಾರಾಯಣ ಮಾಡಿದರು. ಸತ್ಯ ನಾರಾಯಣ ಪ್ರೌಢ ಶಾಲಾ ನಿವೃತ್ತ ಶಿಕ್ಷಕಿ ಶ್ರೀಮತಿ ನಳಿನಿ ಕೆ.ವೈ ಇವರು ಪೂಜಾ ಮಹತ್ವದ ಬಗ್ಗೆ ತಿಳಿಸಿದರು. ಅವರ ಮಾತಿನ ಶೈಲಿ ಭಕ್ತಾದಿಗಳನ್ನು ವಿಸ್ಮಿತರನ್ನಾಗಿಸಿತು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ಉಚಿತವಾಗಿ ಹೊಲಿಗೆ ಹಾಗೂ ತರಬೇತಿ ನೀಡುವ ಶ್ರೀಮತಿ ಅನುರೂಪಾ ಕೆದಂಬಾಯಿಮೂಲೆ ಹಾಗೂ ಶ್ರೀಮತಿ ನಯನ ಬಳಕ್ಕ. ಅದೇ ರೀತಿ ವೃತ್ತಿ ಪರಿಚಯ ತರಗತಿಯನ್ನು ಮಕ್ಕಳಿಗೆ ನಡೆಸುವ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ಸ್ವರ್ಗ ಇವರನ್ನು ಮಾತೃ ಸಂಘದ ವತಿಯಿಂದ ಗೌರವಿಸಲಾಯಿತು. ಸುಮಾರು ೭೦೦ ಪೂಜೆಗಳು ನೊಂದಾವಣೆಗೊಂಡಿದ್ದು ೨೦೦ ಮಂದಿ ಭಕ್ತಾದಿಗಳು ಪೂಜೆಯಲ್ಲಿ ಭಾಗಿಗಳಾಗಿದ್ದರು. ಕೊನೆಯಲ್ಲಿ ನೆರೆದ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಶಿಕ್ಷಕಿ ಶ್ರೀಮತಿ ಗೀತಾಕುಮಾರಿ .ಬಿ ಯವರು ಕಾರ್ಯಕ್ರಮ ನಿರೂಪಿಸಿದರು.
ಕರಾಟೆ ತರಬೇತಿ-ಉದ್ಘಾಟನೆ
ನಮ್ಮ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಆರೋಗ್ಯವಂತ ಶರೀರವನ್ನು ಕಾಪಾಡಲು ಹಾಗೂ ಸ್ವಯಂ ರಕ್ಷಣೆಗಾಗಿ ಕರಾಟೆ ತರಗತಿಯನ್ನು ಆರಂಭಿಸಲಾಯಿತು. ಕರಾಟೆ ತರಗತಿಯನ್ನು ಬ್ಲಾಕ್ ಪಂಚಾಯತ್ ಸದಸ್ಯೆ ಸವಿತಾ ಬಾಳಿಕೆ ದೀಪ ಬೆಳಗಿಸಿ ಉದ್ಘಾಟಿಸಿದರು. ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ಶುಭಾಶಂಸನೆ ಗೈದರು. ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ ಭಟ್ ಸ್ವಾಗತಿಸಿದರು. ಶ್ರೀಮತಿ ಗೀತಾಂಜಲಿ ಟೀಚರ್ ವಂದನಾರ್ಪಣೆಗೈದರು. ಶಿಕ್ಷಕ ಪದ್ಮನಾಭ ಸರ್ ಕಾರ್ಯಕ್ರಮ ನಿರೂಪಿಸಿದರು. ಫಿಫ್ತ್ ಡಾನ್ ಬ್ಲಾಕ್ ಬೆಲ್ಟ್ ಪಡೆದ ಪಿ.ಕೆ ಆನಂದ್ ರವರು ಮಕ್ಕಳಿಗೆ ಕರಾಟೆ ತರಗತಿಯನ್ನು ಆರಂಭಿಸಿದರು.
ವೀರ ಸಾವರ್ಕರ್-ಸಿ.ಡಿ ಪ್ರದರ್ಶನ
ನಮ್ಮಶಾಲೆಯಲ್ಲಿ ಸ್ವಾತಂತ್ರ್ಯ ವೀರ ವೀರ ಸಾವರ್ಕರ್ ಜಯಂತಿ ಹಾಗೂ ಕಾರ್ಗಿಲ್ ವಿಜಯೋತ್ಸವದ ಸಿ.ಡಿ ಪ್ರದರ್ಶನವನ್ನು ಯುವ ಬ್ರಿಗೇಡ್ ಕಾಸರಗೋಡು ಶಾಖೆಯ ವತಿಯಿಂದ ಜರಗಿತು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟೀಷರಿಂದ ಅನುಭವಿಸಿ ಹಿಂಸೆ, ಶಿಕ್ಷೆಯ ಮೈ ರೋಮಾಂಚನವಾಗುತ್ತದೆ. ಅವರ ಧೈರ್ಯ ಸಾಹಸಕ್ಕೆ ತಲೆಬಾಗಲೇ ಬೇಕು.
ಯುವ ಬ್ರಿಗೇಡ್ ನ ಸಂಚಾಲಕರಾದ ಕೃಷ್ಣಪ್ರಸಾದ ಇವರು ಸಿ.ಡಿ ಯನ್ನು ಪ್ರದರ್ಶಿಸಿ ಅಗತ್ಯ ಮಾಹಿತಿಯನ್ನಿತ್ತರು. ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿರುವ ಕುಮಾರಿ ಸ್ನೇಹ ಬಾಳಿಕೆ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಗೀತಾಕುಮಾರಿ.ಬಿ ಎಲ್ಲರನ್ನು ಸ್ವಾಗತಿಸಿದರು.
ಮಕ್ಕಳಿಗೆ ಗದ್ದೆಯಲ್ಲಿ ಪಾಠ-ಬಯಲು ಪ್ರವಾಸ
ನಮ್ಮ ಶಾಲೆಯ ಮಕ್ಕಳು ಮುಖ್ಯೋಪಾಧ್ಯಾಯರಾದ ಪಿ. ಶಿವರಾಮ್ ಭಟ್ ಇವರ ಗದ್ದೆಗೆ ಬೇಟಿ ಕೊಟ್ಟು ಮಕ್ಕಳಿಗೆ ನೇಜಿ ನೆಡುವ ಕ್ರಮವನ್ನು ತಿಳಿಸಿಕೊಡಲಾಯಿತು. ಮಕ್ಕಳೇ ಸ್ವತಃ ನೇಜಿ ನೆಟ್ಟು ಓ ಬೇಲೆ ಹಾಡನ್ನು ಹಾಡಿ, ಹೊಸ ಅನುಭವವನ್ನು ಪಡೆದರು. ಗದ್ದೆ ಬೇಸಾಯದ ಬಗ್ಗೆ ಅರುಣಾ ಶಿವರಾಮ್ ರವರು ಮಾಹಿತಿಗಳನ್ನು ನೀಡಿದರು. ಶಿಕ್ಷಕರಾದ ಪದ್ಮನಾಭ್ ಆರ್ ಹಾಗೂ ಮಿಥುನ್ ಸರ್ ರವರು ನೇತೃತ್ವ ವಹಿಸಿದರು.
ತರಗತಿ ಪಿಟಿಎ
ನಮ್ಮ ಶಾಲೆಯಲ್ಲಿ ಜುಲೈ ೨೧ ರಂದು ಎಲ್.ಪಿ ಹಾಗೂ ಯು.ಪಿ ತರಗತಿಯಲ್ಲಿ ತರಗತಿ ಪಿ.ಟಿ.ಎ ಜರಗಿತು. ಆಯಾ ತರಗತಿಗಳಲ್ಲಿ ೧ನೇ ಯೂನಿಟ್ ಟೆಸ್ಟ್ನ ಮೌಲ್ಯ ಮಾಪನ ವರದಿ, ತರಗತಿ ಚಟುವಟಿಕೆಯಲ್ಲಿ ಮಕ್ಕಳ ಭಾಗವಹಿಸುವಿಕೆ, ರಕ್ಷಕರು ಗಮನಿಸಬೇಕಾದ ವಿಚಾರ, ರಕ್ಷಕರ ಅಭಿಪ್ರಾಯ ಮೊದಲಾದ ಕುರಿತು ಚರ್ಚಿಸಲಾಯಿತು. ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ್ ಭಟ್ ರವರು ಪ್ರತಿ ತರಗತಿಯನ್ನು ಸಂದರ್ಶಿಸಿ ಮೋನಿಟರಿಂಗ್ ನಡೆಸಿದರು.
ಚಾಂದ್ರ ದಿನ
ನಮ್ಮ ಶಾಲೆಯಲ್ಲಿ ಚಾಂದ್ರದಿನದ ಬಗ್ಗೆ ಮಾಹಿತಿಯನ್ನು ನೀಡಲು ಸ್ಲೈಡ್ ಶೋ ಪ್ರದರ್ಶನ ನಡೆಯಿತು. ವಿಜ್ಞಾನ ಶಿಕ್ಷಕ ಶ್ರೀ ವೆಂಕಟವಿದ್ಯಾಸಾಗರ್ ರವರು ಸಾಕ್ಷಾ ಚಿತ್ರ ಸಮೇತವಾಗಿ ಚಾಂದ್ರ ದಿನದ ಬಗ್ಗೆ, ಚಾಂದ್ರಾಯಾನದ ಆರಂಭ, ಚಂದ್ರನ ಅಂಗಳದಲ್ಲಿ ನಡೆದ ಅನ್ವೇಷಣೆ, ಸಹಕರಿಸಿದ ವಿಜ್ಞಾನಿ ಬಳಗದ ಕುರಿತು ಕುಲಂಕುಶವಾಗಿ ಎಲ್.ಪಿ ಹಾಗೂ ಯು.ಪಿ ತರಗತಿಗಳಿಗೆ ಪ್ರತ್ಯ ಪ್ರತ್ಯೇಕವಾಗಿ ವಿವರಿಸಿದರು.
ಶಾಲಾ ಮಕ್ಕಳ ದಂಡು ರಕ್ಷಿತಾರಣ್ಯದಲ್ಲಿ
ನಮ್ಮ ಶಾಲೆಯಲ್ಲಿ ಜುಲೈ ಮೊದಲ ವಾರ ವನಮಹೋತ್ಸವದ ಅಂಗವಾಗಿ ಶಾಲಾ ಸಮೀಪದ ವಾಣೀನಗರದ ರಕ್ಷಿತಾರಣ್ಯಕ್ಕೆ ಬಯಲು ಪ್ರವಾಸವನ್ನು ಕೈಗೊಳ್ಳಲಾಯಿತು. ವನಮಹೋತ್ಸವದ ಆಚರಣೆಯ ಧ್ಯೇಯ, ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಶಿಕ್ಷಕ ಶ್ರೀ ವೆಂಕಟ ವಿದ್ಯಾಸಾಗರ್ ರವರು ತಿಳಿಸಿದರು. ಕಾಡಿನ ಈ ಯಾನದಿಂದ ಅಲ್ಲಲ್ಲಿ ಹರಿಯುವ ನೀರ ಝರಿಗಳು, ಕಾಡು ಹಣ್ಣುಗಳಾದ ಕುಂಟಲಹಣ್ಣು ಚೂರಿಕಾಯಿ, ಚಾಕಟೆ ಕಾಯಿಗಳ ರುಚಿ, ಆಕಾಶದೆತ್ತರ ಭೀಮಗಾತ್ರದಲ್ಲಿರುವ ಮರಗಳು, ವಿಶೇಷ ರೀತಿಯ ಬಳ್ಳಿ, ನಾನಾ ವರ್ಗ ಮರಗಳ ಪರಿಚಯ, ಔಷದೀಯ ಸಸ್ಯ, ಹಾಸಿಗೆಯಂತೆ ಹಾಸಿರುವ ಗಾಳಿ ಮರದ ಎಲೆಗಳು,ಓಸಿಯಾಗಿ ಸಿಗುವ ಎಸಿ ಅನುಭವ ನೀಡುವ ಹವಾಮಾನದ ಪ್ರತ್ಯಕ್ಷ ಅನುಭವವನ್ನು ಪಡೆಯುವಂತಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಯಾಗಿ ನಮ್ಮ ಶಾಲಾ ರಕ್ಷಕ ಬಳಗದವರಾದ ಶ್ರೀ ಕೃಷ್ಣ ನಾಯ್ಕ ಹಾಗೂ ಶ್ರೀ ಲಕ್ಷ್ಮಿ ಪ್ರೀಯ ಸರಳಾಯ ಇವರು ನಮಗೆ ಸಾಥ್ ನೀಡಿದರು. ಶಾಲಾ ಎಲ್ಲಾ ಮಕ್ಕಳು ಕಾಡಿನ ಯಾನದ ಸವಿಯನ್ನಿತ್ತರು.
ಇಂಗ್ಲಿಷ್ ಹಾಗೂ ಮಲಯಾಳಂ ಕ್ಲಾಸುಗಳ ಉದ್ಘಾಟನೆ
ನಮ್ಮ ಶಾಲೆಯಲ್ಲಿ ರಕ್ಷಕ ಶಿಕ್ಷಕ ವತಿಯಿಂದ ಇಂಗ್ಲಿಷ್ ಹಾಗೂ ಮಲಯಾಳಂ ಕ್ಲಾಸುಗಳ ಉದ್ಘಾಟನಾ ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಕೆ.ವೈ ಸುಬ್ರಹ್ಮಣ್ಯ ಭಟ್ರವರು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಈ ದೀಪ ಜ್ವಾಲೆ ನಿಮ್ಮ ಬಾಳನ್ನು ಬೆಳಗಲಿ ಎಂದು ಶುಭಹಾರೈಸಿದರು. ಶ್ರೀಮತಿ ನಿಶಿತಾ ಪ್ರಕಾಶ್ ಪೆರ್ಲ ಇವರು ತರಗತಿ ಸಂಪನ್ಮೂಲ ವ್ಯಕ್ತಿಯಾಗಿ ಸಹಕರಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಚಿತ್ರಾ ಮುಂಗ್ಲಿಕಾನ ರವರು ಉಪಸ್ಥಿತರಿದ್ದರು. ಶಿಕ್ಷಕ ಸಚ್ಚಿದಾನಂದ ಎಸ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಶಿವರಾಮ್ ಭಟ್ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಬಿ ಗೀತಾ ಕುಮಾರಿ ವಂದನಾರ್ಪಣೆ ಗೈದರು.
ಮಾತೃ ಸಂಗಮದ ವಿಶೇಷ ಸಭೆ
ನಮ್ಮ ಶಾಲೆಯಲ್ಲಿ ಮಾತೃ ಸಂಘದ ವಿಶೇಷ ಸಭೆ ಜರಗಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಚಿತ್ರ ಮುಂಗ್ಲಿಕಾನ ಇವರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಇವರು ವರಮಹಾಲಕ್ಷ್ಮಿ ಪೂಜೆಯ ಕರಪತ್ರವನ್ನು ಬಿಡುಗಡೆಗೊಳಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿ ಯವರು ಪೂಜೆಯ ಸಕಲ ವಿವರವನ್ನು ನೀಡಿದರು. ಶಿಕ್ಷಕಿ ಶ್ರೀಮತಿ ಕಲಾವತಿ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಗೀತಾಂಜಲಿ ಪ್ರಾರ್ಥಿಸಿದರು.
ಹಲಸು ದಾಸ್ತಾನು ಕಾರ್ಯಾಗಾರ
ವಿಪರೀತ ಮಳೆ, ಹವಮಾನ ವೈಪರೀತ್ಯ ಇತ್ಯಾದಿ ಕಾರಣಗಳಿಂದಾಗಿ ಮಳೆಗಾಲ ಬಂತೆಂದರೆ ತರಕಾರಿ ಬೆಲೆ ಗಗನಕ್ಕೇರುವುದು ಸರ್ವೇ ಸಾಮಾನ್ಯ ಸಂಗತಿ, ಈ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಹಲಸಿನ ಸೋಳೆ ದಾಸ್ತಾನು ಕಾರ್ಯಾಗಾರ ಜರಗಿತು. ಶಾಲಾ ಪರಿಸರದಲ್ಲಿ ಬೆಳೆದ ತಾಜಾ, ವಿಷಮುಕ್ತ ಆಹಾರ ಬೆಳೆ ಹಲಸು ಮಕ್ಕಳ ಮಧ್ಯಾಹ್ನದೂಟಕ್ಕೆ ಪ್ರಯೋಜನಕಾರಿಯಾಗಲೆಂದು ಉಪ್ಪಿನಲ್ಲಿ ದಾಸ್ತಾನು ಮಾಡಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ್ ಭಟ್ ಸಹಿತ ಶಿಕ್ಷಕರು ಹಾಗೂ ರಕ್ಷಕರು ಸೇರಿಕೊಂಡು ಸುಮಾರು ೩೦ ಹಲಸಿನ ಕಾಯಿಯನ್ನು ಉಪ್ಪಿನಲ್ಲಿ ದಾಸ್ತಾನು ಮಾಡಲಾಯಿತು.
Subscribe to:
Posts (Atom)